Saturday, 18 January 2014

ನಂಬಿಕೆ ಮತ್ತು ಕಾಕತಾಳೀಯ

           ಸಮಾಜದಲ್ಲಿ ಮನುಷ್ಯನೊಬ್ಬ ಸಂಘಜೀವಿ. ಮಗುವಾಗಿ ಹುಟ್ಟುತ್ತಲೇ ಭಾವಗಳ ಬಂಧ  ಬೆಸೆದು ಬದುಕನ್ನು ರೂಪಿಸುವ ಸಮಾಜದಲ್ಲಿ ಬೆರೆತು ಬಾಳುವ ಮೌಲ್ಯ ಕಲಿಯುತ್ತಲೇ ಬೆಳೆಯುತ್ತಾನೆ .. ಆ ಬಂಧದ ಮೊದಲ ಕೊಂಡಿ ಹುದುಗಿರುವುದೇ ನಂಬಿಕೆಯಲ್ಲಿ.  ಅಮ್ಮನ ಅಪ್ಪುಗೆಯಲ್ಲಿ ಆಕೆಯ ತನುವಿನ ಅಮೃತದ  ಸವಿಯಲ್ಲಿ  ಆಕೆಯ ನುಡಿಯಲ್ಲಿ ಈ ನಂಬುಗೆಯ ಅಚ್ಚು ಮೊದಲು ಮೂಡುತ್ತದೆ. ಆಮೇಲೆ ಅಪ್ಪ, ಅಣ್ಣ , ತಂಗಿ, ತಮ್ಮ , ಬಳಗ ಹೀಗೆ ಸಮಾಜಮುಖಿಯಾಗುತ್ತ ಸಾಗುತ್ತದೆ. ಹಾಗಾದಲ್ಲಿ ಉತ್ತಮ ಸಮಾಜದ ನಿರ್ಮಾಣದಲ್ಲಿ  ನಂಬಿಕೆಯ ಪಾತ್ರ ಎಷ್ಟಿದೆ ಅಲ್ಲವೇ ...
             ನಂಬಿಕೆ ಅನ್ನುವು ಮನಸ್ಸಿನ ಒಂದು ಸ್ಥಿತಿ ಅಥವಾ ಭಾವ. ನಾನು ನಿನ್ನನ್ನು ನಂಬುತ್ತೇನೆ ಎಂದಾಗ ನನಗೆ ನಿನ್ನ ಮಾತಿನ ಮೇಲೆ ವಿಶ್ವಾಸ ಇದೆ ಎಂದರ್ಥವಾಗುತ್ತದೆ.  ಇದ್ದುದು ಇದ್ದುದಂತೆ ಕಂಡಿತೆಂದಾಗ, ಇಲ್ಲವೆ ಬಲವಾದ ಪರಿಣಾಮದಿಂದ ಇನ್ನೊಬ್ಬನ ಮನಸ್ಸನ್ನು ನಾಟುವಂತೆ ಮಾಡಿದಾಗ , ನಾವು ಒಬ್ಬರ ಬಗ್ಗೆ ಏನು ಕಲ್ಪಿಸಿರುತ್ತೆವೋ ಅವರು ಅದನ್ನು ಉಳಿಸಿಕೊಂಡಾಗ ನಮ್ಮ ಮನಸ್ಸಿನಲ್ಲಿಅವರ ಬಗೆಗೆ  ಪೂರಕವಾದ ಪ್ರಭಾವಲಯ ಉಲ್ಲಸಿತಗೊಂಡು ಪ್ರತಿಕ್ರಿಯೆಯನ್ನು ನೀಡುತ್ತದೆ .. ಅದುವೇ ನಂಬಿಕೆ .  ನಂಬಿಕೆ ಗಟ್ಟಿ ಇದ್ದಾಗ ಸಂಬಂಧಗಳೂ ಗಟ್ಟಿಯಾಗಿರುತ್ತವೆ. ಈ  ಭೂಮಿ ಮೇಲೆ ಒಳ್ಳೇದು ಏನೆ ನಡೆಯುತ್ತಾ ಇದ್ರೂ ನಂಬಿಕೆ ಮೇಲೆ. ಅಸತ್ಯದ ಮೇಲೆ ಇರುವ ನಂಬಿಕೆ ಲಾಭ ಇರುವ ವರೆಗೆ ಮಾತ್ರ. ಎಲ್ಲಿ ಲಾಭ ಕಮ್ಮಿಯೋ  ಅಲ್ಲಿ ನಂಬಿಕೆಯೂ ಅಸ್ತಿತ್ವ ಕಳೆದುಕೊಳ್ಳುತ್ತೆ.
              ನಾಸ್ತಿಕ ಮಂದಿ ದೇವರನ್ನು ನಂಬುತ್ತಾರೆ. ಆತನ ನಂಬಿಕೆಯಲ್ಲಿ ಪ್ರತಿಕ್ಷಣ ಜೀವನ ಕಳೆಯುತ್ತಾರೆ. ಒಳ್ಳೆಯದು ನಡೆದರೆ ದೇವರು ಇದ್ದಾನೆ , ಕೆಟ್ಟದು ಮಾಡಿದ್ರೆ ಎಲ್ಲ ದೇವರ ಆಟ ಅಂತ ಮುನ್ನಡೆಯುತ್ತೇವೆ. ದೇವರಿಗೆ ಹರಕೆ ಸಲ್ಲಿಸಿ ಪೂಜೆ ಮಾಡಿ ಓದದೆ ಹೋದರೆ exam ಪಾಸು ಮಾಡುತ್ತೇವೆ?.ಮನೆಯಲ್ಲಿಯಾರಿಗಾದರೂ  ಜೋರು ಹುಷಾರಿಲ್ಲದ ಸಮಯ ದೇವರ  ಮೊರೆ ಹೋಗುತ್ತೇವೆ .. ಆತ ಗುಣಮುಖನಾಗುತ್ತಾನೆ ಕೀರ್ತಿ ದೇವರಿಗೆ .... ಆದರೆ ಆತನ ಜೀವದ ನಾಜೂಕು ಸ್ಥಿತಿಯಲ್ಲಿ ವೈದ್ಯಕೀಯ ನೆರವು ಇದ್ದುದು ಹೌದಲ್ಲವೇ? ಅದೇ ರೀತಿ ಕಾಕತಾಳಿಯ. ಅದು ನಮ್ಮ ಪರಿಶ್ರಮದ ಫಲವಲ್ಲ ,ನಾವದನ್ನು ನಿರೀಕ್ಷೆ ಕೂಡ ಮಾಡಿರೋದಿಲ್ಲ ನಮಗೆ ಒಳ್ಳೆಯದು ಮಾಡಲೆಂದೇ ಮರೆಯಲ್ಲಿ ಕೂತಿದ್ದು ಧುತ್ತನೆ ಎದುರು ಬಂದು ನಿಲ್ಲುವ ನೆಂಟ. (ittefak ) ಹಲವಾರು ಬಾರಿ ಕಾಕತಾಳೀಯವಾಗಿ ನಡೆದ ಘಟನೆಗಳಿಂದಾಗಿ ನಂಬಿಕೆಯೂ ಮೂಡುತ್ತದೆ . ಇನ್ನಷ್ಟು  ಜನರನ್ನು ನಂಬುವಂತೆ ಮಾಡುತ್ತದೆ. ಹೀಗೇ ನಂಬಿಕೆ ಮತ್ತು ಕಾಕತಾಳೀಯಗಳ ನಡುವೆ  ಬದುಕು ಪಲ್ಟಿ  ಹೊಡೆಯುತ್ತಾ ಸಾಗುತ್ತದೆ...........

                                                                                                                       - ಕಾವ್ಯಮಯಿ 

Wednesday, 15 January 2014

ಅಭೀಷಾ ಮತ್ತು ಅಮ್ಮ ಮಗುವಿನ ಬಂಧ

         ಅಬ್ಬಾಸಿಯಾದ ನಮ್ಮ ಫ್ಲಾಟ್ ನ  ಎದುರುಗಡೆ ಪ್ಲಾಟ್ ಗೆ ಹೊಸದಾಗಿ  ತಮಿಳು ಕ್ರಿಶ್ಚಿಯನ್ ಕುಟುಂಬ ಕಳೆದ ತಿಂಗಳು ವಾಸಕ್ಕೆ ಬಂದಿತ್ತು .ಒಬ್ಬ ಪಾಸ್ಟೆರ್, ಅವನ ಹೆಂಡತಿ , ಇಬ್ಬರು ಹೆಣ್ಣು ಮಕ್ಕಳು ಏಂಜಲ್ ಮತ್ತು ಅಭೀಷಾ ಹಾಗೂ ಹೆಂಡತಿಯ ಸೋದರ ... ಬಂದ ಒಂದೆರಡು ದಿನದಲ್ಲೇ ನಮ್ಮ ಪರಿಚಯ ಸಾಧ್ಯವಾಯಿತು. ಅವರಿಗೆ ಸೂಕ್ತಸಲಹೆಗಳನ್ನು ನೀಡುತ್ತ ಇದ್ದೆವು.. ಆ ಮನೆಯೊಡತಿಯೊಂದಿಗೆ ನಮ್ಮ ಪರಿಚಯ ಸ್ವಲ್ಪ ಹತ್ತಿರವಾಗುತ್ತಿದ್ದಂತೆಯೇ ನಾವು ೮ ತಿಂಗಳ ಮಗು ಅಭೀಷಾಳನ್ನು ಸಮಯ ಇದ್ದಾಗ ನಮ್ಮ ಮನೆಗೂ ಕಳಿಸಲು ಕೇಳಿದ್ದೆವು . ಅವರ ಮನೆಯಲ್ಲಿ ಟಿವಿ ಇರಲಿಲ್ಲವಾದ್ದರಿಂದ ದೊಡ್ಡ ಹುಡುಗಿ ಏಂಜಲ್ ಮಗುವನ್ನು ಕರಕೊಂಡು ನಮ್ಮ ರೂಮ್ಗೆ ಬರುತ್ತಿದ್ದಳು ... ಮೊದಲ ದಿನವಂತೂ ನಮಗೆ ಖುಷಿಯೋ ಖುಷಿ ... ಎಷ್ಟೋ  ಸಮಯದ ಬಳಿಕ ಮಗುವೊಂದನ್ನು ಎದೆಗಾನಿಸಿ ಹಿಡಿದಿದ್ದೆವು... ನಾನು,ನನ್ನ ಹಬ್ಬಿ ಮತ್ತು ಶೇರಿಂಗ್ನಲ್ಲಿ ನಮ್ಮೊಂದಿಗೆ ಇರುವ ವೆಂಕಟೇಶ್ , ಶೋಭಾ ಅವರಿಗೂ ಬಲು ಖುಷಿಯಾಗಿತ್ತು. ಆ ದಿನ ಆ ಪುಟ್ಟ ಮಗು ನಮಗೆ ನೀಡಿದ ಸಂಭ್ರಮ ನಾನು ಇನ್ನೂ ಮರೆಯಲಾರೆ, ನೆನಪಿನಾಳಕ್ಕೆ ಹೋಗಿ ಹುದುಗಿದರೆ  ಮಧುರ ಕ್ಷಣಗಳನ್ನು ಬೇರೆ ಯಾವುದೇ ವಿಷಯದಿಂದ ಪುನರ್ರಚಿಸಲು ಆಗುವುದಿಲ್ಲ .
        ನಿಜ ಮಕ್ಕಳು  ಪ್ರಕೃತಿಯ ತುಂಬಾ ಸುಂದರವಾದ ಪ್ರಕೃತಿಯ ಕೃತಿಗಳು. ಎಲ್ಲ ಮಕ್ಕಳೂ ಚಂದ.. ಮಕ್ಕಳು ನಗುತ್ತ ಇದ್ದರೆ ಎಷ್ಟು ಅಂದ! ಸಾಕ್ಷಾತ್ ಭಗವಂತನು ವೇಷ ಮರೆಸಿ ಮಡಿಲಲ್ಲಿ ನಿಂದು ಕೈಕಾಲು ಆಡುವಂತೆ  ಒಂದು ಭಾಸ. ಎಂತಹಾ ಕಟುಕ ಮನಸನ್ನು ಗೆಲ್ಲಿಸಿ ಶರಣಾಗಿಸುವ ಮೋಹಕ ಮೃದು ಮನಸ್ಸು !!! ನಿಜವಾಗಲೂ ಅದ್ಭುತ ! ಮಗುವನ್ನು ಕಂಡಾಗ ಈ ಸೃಷ್ಟಿ ಅದೆಷ್ಟು ಸೌಂದರ್ಯದ ವಿಶಾಲ ಉದ್ಯಾನ... ಅದೆಷ್ಟು ಕ್ರಿಯಾಶೀಲ ಅಂತರಂಗ ಬೆಸುಗೆ.. ನೋವುತಣಿಸುವ ಅಪರಿಮಿತ ಜೀವಜಲಧನ.. ಬದುಕಿನ ಮುನ್ನಡೆಗೆ ಅರಿವಿಗೆ ಬರದ ಸಾವಿರದೊಂದು ಪ್ರೇರಣೆ!!!
         ಹುಂ! ಆ ಮಗು ಯಾರದೋ ಏನೋ.. ಆದರೆ ನಮ್ಮ ಮನೆಯಂಗಳದಲ್ಲಿ ಸಂತಸದ ಮಳೆ ಸುರಿಸಿದ ಬಾನು. ನಮ್ನಮ್ಮದೇ ವ್ಯವಹಾರದಲ್ಲಿ ಮುಳುಗಿದ್ದವರಿಗೆ ಇದೆಲ್ಲಾ ಬಿಟ್ಟು ಇನ್ನೂ ಇದೆ ನಾನಾ ಕಡೆ ನೋಡಿ ನಗುನಗತಾ ಇರಿ ಎಂದು ಮರೆತ ನಗುವನ್ನು ಮತ್ತೆ ತಂದುಕೊಟ್ಟ ದೇವಕನ್ಯೆ! ಮಕ್ಕಳ ವಿನೋದದ ಗುಂಗನ್ನು ಸವಿಯುವ ಮೌನ ಹೃದಯಗಳಿಗೆ ಯಾರ ಮಗುವೂ ಬೇರೆಯದಲ್ಲ... ನಮ್ಮ ಮಗುವಷ್ಟೇ ಕಾಳಜಿ ಪ್ರೀತಿ ಅದೆಲ್ಲಿಂದ ಸುರಿಸುರಿದು ಬರುತ್ತದೋ ನನಗೆ ತಿಳಿಯದು. ಎಷ್ಟೋ ಬಾರಿ ಅವಳನ್ನು ತಟ್ಟಿ ನಿದ್ದೆ ಮಾಡಿಸಿ ಮನೆಗೆ ಕಳಿಸಿದುದುಂಟು . ಅಭಿಷಾ ಅಂತೂ ನಮ್ಮೆಲ್ಲರ ಮನದ ಶಾಶ್ವತ ನಿವಾಸಿ. ನಮಗವರ ಭಾಷೆ ಬರದಿದ್ದರೂ ಮೂಕವಾಗಿ ಸಂವಹನ ಮಾಡುತ್ತೇವೆ.. ಅಭೀಷಾಗೆ ನಮ್ಮ ಟಿವಿಯ 'ಕುಡಲಾ ತೆಲಿಪುಗ' ಶೀರ್ಷಿಕೆ ಗೀತೆಯ 'ಚಂದ ಉಂಟಲ್ಲ' ಅನ್ನುವ ಪದ ಬಹಳ ಬಹಳ ಇಷ್ಟ ಅವಳ ಭಾಷೆ ಅರಿಯದ ನಾವು ಈ ಪದ ತುಸು ಸ್ವರ ನೀಡಿ ಹೇಳಿದರೆ ಬಾಯಗಲ ನಗುತ್ತಾಳೆ.ಬೇರೇನೆ ಅಂದರೂ ತನ್ನದೇ ಮುಗ್ಧ ಕಾರ್ಯಕಲಾಪದಲ್ಲಿ ವಿಹರಿಸುತ್ತಾ ನಮ್ಮ ಗೊಡ್ಡುತನವನ್ನು(!!) ಆ ಮುದ್ದುಕಂದ ಕೇವಲ ನಮ್ಮ ಕಣ್ಣುಗಳನ್ನು ಓದಿ ಅರ್ಥ ಮಾಡಿಕೊಳ್ಳುತ್ತಾಳೆ . ಮಕ್ಕಳೇ ಹಾಗೆ ಅವರಿಚ್ಛೆಗೆ  ವಿರುದ್ಧವಾದರೆ ನಮ್ಮ ಮೂತಿಗೆ ಒದೆಯುವಂತೆ ಬಿಡುತ್ತಾರೆ ತಮ್ಮ ಅಳುವೆಂಬ ಅತಿದೊಡ್ಡ ಪ್ರಬಲ ಬ್ರಹ್ಮಾಸ್ತ್ರ !! .ಆಸ್ಪತ್ರೆಯಲ್ಲಾದರೆ sevoflurane ಮೂಸಿಸಿಯೋ ಇಲ್ಲವೇ  paracetamol ಗೆ midazolam ಸೇರಿಸಿ ಮಲಗಿಸಿಬಿಡುತ್ತೇವೆ. ಮನೆಯಲ್ಲಿ ಹಾಗೆ ಮಾಡಲು ಬರದು ಹಾಗಾಗಿ ಈ ಯುದ್ಧದಿಂದ ಯಾರೂ ಸುಲಭದಲ್ಲಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. !
        ನಿನ್ನೆ ನಮ್ಮೊಂದಿಗೆ ಆದದ್ದೂ ಅದೇ . ಸುಮಾರು ದಿನಗಳಿಂದ ಜ್ವರ ಹಾಗು ಶೀತ ಕಫ಼ ದೋಷದಿಂದ ಅಭೀಷಾ ಅರೋಗ್ಯ ಕೆಟ್ಟಿತ್ತು . ನಮ್ಮ ಮನೆಗೆ ಬಂದಿರಲಿಲ್ಲ .  ನಿನ್ನೆ ಸಂಜೆ ಅವರಮ್ಮ ಅಪ್ಪ ತುರ್ತುಕಾರ್ಯಕ್ಕಾಗಿ ಮನೆಯಿಂದ ಹೊರಹೋಗಬೇಕಾಯಿತು. ಅರ್ಧ ಗಂಟೆ ಮಕ್ಕಳನ್ನು ನಮ್ಮ ಮನೆಗೆ ಬಿಟ್ಟಿದ್ದರು . ಅವರತ್ತ ಹೋಗುತ್ತಲೇ ಅಭೀಷಾ ಆಳುವುದಕ್ಕೆ ಪ್ರಾರಂಭ ಮಾಡಿದಳು . ಎಷ್ಟೇ ಸಮಾಧಾನ ಮಾಡಿದರೂ ೧ ಗಳಿಗೆ ಸುಮ್ಮನಿರಲಿಲ್ಲ . ಇಷ್ಟು ದಿವಸದಿಂದ ಅಳು ಅಂದರೆ ಏನೆಂದೇ ಅರಿಯದಂತೆ ನಗುತಲಿದ್ದ ಮಗು ಇವತ್ತು ಯಾಕೆ ಹೀಗೆ ಮಾಡುತ್ತಿದೆ? ಗೋಡೆ ತುಂಬಾ ಅಂಟಿಸಿದ್ದ ಮಕ್ಕಳ ಫೋಟೋ ಕಂಡು ಮಂತ್ರಮುಗ್ಧವಾಗುತ್ತಿದ್ದ ಮಗು ಅಂದು ರಚ್ಚೆ ಹಿಡಿದು ಅಳುತ್ತಿತ್ತು. ಶೀತ ಇನ್ನೂ ಗುಣವಾಗದ ಕಾರಣ ಅದರ ಮೂಗು ಕಟ್ಟಿ ಹೋಗಿತ್ತು . ಉಸಿರಾಡಲು ಕಷ್ಟವಾಗುತ್ತಿತ್ತು . ಎಲ್ಲಕಿಂತ ಹೆಚ್ಚಾಗಿ ಅಮ್ಮನನ್ನು miss  ಮಾಡಿಕೊಳ್ಳುತ್ತಿತ್ತು . ನಾವು ಏನೇ ಪ್ರಯತ್ನ ಮಾಡಿದರು ಸುಮ್ಮನಿರಿಸಲಾಗಲಿಲ್ಲ... ಪುಟ್ಟ ಪುಟ್ಟ ಕಣ್ಣುಗಳಲ್ಲಿ ಕುಂಭದ್ರೋಣ ಮಳೆಯಂತೆ ಸುರಿಯಿತು ಕಣ್ಣೀರು . ತಟ್ಟಿ  ಮಲಗಿಸಲು ನೋಡಿದೆ , ಉಸಿರಾಡಲು, ಅಳಲು, ಉಗುಳು ನುಂಗಲು  ಸಾಧ್ಯವಾಗದೆ ಯಾತನೆಯನ್ನು ಪಡುತ್ತಿತ್ತು.. ನಮಗೋ ಏನು ಮಾಡಲೂ ಗೊತ್ತಾಗಲಿಲ್ಲ. ನಾನು ಸಾಧ್ಯವಾದಷ್ಟು ಮೂಗೊರೆಸಿ ಮುಖ ಒರೆಸಿ ಸಮಾಧಾನ ಮಾಡಿದರು ಸರಿಕಾಣಲಿಲ್ಲ. drops ಏನಾದರು ಇದೆಯೇ ನೋಡಿದೆ ಸಿಗಲಿಲ್ಲ. ಮಗುವನ್ನು ಸುಮ್ಮನಿರಿಸಲು ನನ್ನ ಹಬ್ಬಿ ಕೂಡಾ ಮಾಡಿದ ಪ್ರಯತ್ನ ವಿಫ಼ಲವಾಯಿತು .
          ಸಂಜೆ ೭ ಗಂಟೆಗೆ ಅವರಮ್ಮ ಬಂದರು. ಅಮ್ಮನನ್ನು ಕಾಣುತ್ತಲೇ ಗಪಚುಪ್. ಅಮ್ಮನ ಭುಜವೇರಿ  ಅಳುವು ನಿಂತು ನಗು ಮೂಡಿ ಅವಳನ್ನು ಸಮಾಧಾನ ಮಾಡಲು ಸಲ್ಲದ ಮಂಗಚೇಷ್ಟೆಮಾಡುತ್ತ ನಿಂತವರತ್ತ ನೆತ್ತನೋಟ ನೆಟ್ಟಂತೆಯೇ ನೋಡುತ್ತಾ ಮನೆ ಸೇರಿದಳು . ಟಾಟಾ ಎಂದು ಕೈಯ್ಯಾಡಿಸಿ ಯಥಾಸ್ಥಿತಿಗೆ  ಮರಳಲೆತ್ನಿಸಿದೆವು . ಮತ್ತೆ ಮತ್ತೆ ಅವಳ ಮುಖ ಕಣ್ಣ ಮುಂದೆ ಬರುತ್ತಿತ್ತು. ರಾತ್ರೆಯೆಲ್ಲ ಅವಳದೇ ಮಾತು ಕನಸು. ಅರ್ಧ ಗಂಟೆ ಅವಳನ್ನು ಸರಿಯಾಗಿ ನೋಡಲಿಕ್ಕೆ ಆಗಿಲ್ಲ. ಆದರೆ ಅಮ್ಮ ಬಂದಾಕ್ಷಣ ಅವಳ ಮನಸ್ಸು ಹೇಗೆ secure feel  ಮಾಡಿಕೊಂಡಿತು.. ಅಮ್ಮನ ಬರವು ಹೇಗೆ ತಿಳಿಯಿತು. ಎಲ್ಲ ದುಗುಡ ಅಮ್ಮನನ್ನು ಕಂಡಾಗ ಹೇಗೆ ದೂರವಾಯಿತು.. ಈ ಅಮ್ಮ ಮಗುವಿನ ಬಂಧ ವರ್ಣನಾಮಯ .. ಎಷ್ಟು ವರ್ಣಿಸಿದರೂ ಸಾಲದು .. ನನಗೂ... ಒಮ್ಮೆ ಮಗುವಂತೆ  ಅಮ್ಮನ ಮಡಿಲು ಸೇರುವ ತವಕವಾಯಿತು ....

                                                                                                                   
  - ಕಾವ್ಯಮಯಿ 




Thursday, 2 January 2014

ಬಾರದ 'ನಾಳೆ 'ಗಾಗಿ ಬದುಕುವ ನಾವು.....

          ಜೀವನದಲ್ಲಿ ಪ್ರತಿಯೊಂದು ಸೆಕೆಂಡು ಕಳೆದಾಗಲೂ ಅದೊಂದು ನೆನಪಾಗಿ  ಭೂತಕಾಲಕ್ಕೆ ಜಾರಿಹೋಗುತ್ತದೆ . ನಿಮಿಷ, ಗಂಟೆ, ವರ್ಷಗಳಾಗಿ ಎಲ್ಲೋ ಹಿಂದೆ ಉಳಿದುಬಿಡುತ್ತದೆ . ಎಲ್ಲರೂ  ಪ್ರತಿಕ್ಷಣ ಏನಾದರೊಂದು ಕೆಲಸ ಕಾರ್ಯ ಮಾಡುತ್ತಲೇ ಇರುತ್ತೇವೆ . ಗತಿಸಿದ ಎಲ್ಲಾ ಕ್ಷಣಗಳನ್ನು ನೆನಪಿಡುವುದು ಸಾಧ್ಯವಿಲ್ಲ. ಎರಡು ವರ್ಷಗಳ ಹಿಂದೆ ಅಕ್ಟೋಬರ್ 10ರಂದು 7.30ಕ್ಕೆ ಏನು ಮಾಡಿದೆ ಎಂದು ಕೇಳಿದರೆ ಏನೆನ್ನುವುದು?ಅದನ್ನು ನಾವು ಅದ್ಯಾವಾಗಲೋ ಮರೆತುಬಿಟ್ಟಿರುತ್ತೇವೆ . ತುಂಬಾ ದೊಡ್ಡ ಘಟನೆಗಳು ನಡೆದಿದ್ದರೆ ಅದನ್ನು ನೆನೆಪಿಡುತ್ತೇವೆ . ದಾರಿಯಲ್ಲಿ ಅಚ್ಚು ಹಾಕುತ್ತೇವೆ . ಚಿಕ್ಕಪುಟ್ಟದೆಲ್ಲವನ್ನು ನಮಗರಿಯದಂತೆ  ಮೆದುಳು save ಮಾಡುತ್ತಾ ಹೋಗುತ್ತದೆ.. 
         ವಿಶಾಲವಾದ ಬೋಳು ಮೈದಾನದಲ್ಲೋ ಅಥವಾ ಮರುಭೂಮಿಯಲ್ಲೋ ಮೈಲುಗಟ್ಟಲೆ ನಡಕೊಂಡು ಬಂದು ಹಿಂತಿರುಗಿ ನೋಡುವಾಗ ಎಲ್ಲೋ ಕಾಲೊತ್ತಿದ್ದ ಗುರುತು ಕಾಣುವುದಿಲ್ಲ. ಯಾವುದೊ  ದೊಡ್ಡ ಬಂಡೆ , ಚುಕ್ಕಿಯಂತೆ ಕಾಣುತ್ತೆ . ಜೀವನವೂ ಅದರಂತೆ ಹಿಂತಿರುಗಿ ನೋಡಿದರೆ ಉಂಡದ್ದು ಕುತಿತದ್ದು ಏನೂ ಇಲ್ಲ, ಮುಖ್ಯವಾದುದು ಮಾತ್ರ ಬಣ್ಣ ಹೊಡೆದಂತೆ , wordpad ನಲ್ಲಿ B- ಬೋಲ್ಡ್ ಆಗಿ ಕಾಣುತ್ತದೆ . 
         ಎಂಥ ಅದ್ಭುತ ಅಲ್ಲವಾ ... ಎಷ್ಟೋ ಸಹಸ್ರ  ಕ್ಷಣಗಳನ್ನು ಜೀವಿಸಿರುತ್ತೇವೆ. ಆದರೂ 'ಆ ' ಒಂದು ಕಪ್ಪು ಚುಕ್ಕೆಗಾಗಿ ಇಂದು  ಮುಂದೂ ಸೊರಗುತ್ತೇವೆ.............. ಕ್ಷಣ ಕ್ಷಣಕ್ಕೂ ನೆನಪಾಗಿ ನೆನೆಪಿಸಿ ಘಟಿಸಿದುದಕ್ಕಿಂತ ಹೆಚ್ಚು ಹೆಚ್ಚಾಗಿ ಕನವುತ್ತಾ ಎಂದು ನಮ್ಮನ್ನು ಒಳಗೊಳಗೇ ಕೊಲ್ಲುತ್ತದೆ ನಮ್ಮ ಅಂತಸ್ಥೈರ್ಯವನ್ನು . ನೆಟ್ಟಗೆ ಕುಳಿತಿದ್ದವನೂ ಇಂಚು ಇಂಚಾಗಿ ಕುಸಿಯುತ್ತಾನೆ. ಆತನ ಶರೀರದ ಭಂಗಿಯಲ್ಲೇ ಆತನ ಮನಸಲ್ಲಿ ಏನೇನಾಗುತ್ತಿದೆ ಅನ್ನೋದನ್ನ ಕೆಲವೊಮ್ಮೆ ಎಣಿಸೋಕೆ ಸಾಧ್ಯ . 
          ಇಂದಿನ ಜೀವನ ಹಿಂದಿಗೂ ಮುಂದಿಗೂ ಒಂದು link. ನಮ್ಮ ಮುಂದಿನದು ಹಿಂದಿನದಕಿಂತ ಚೆನ್ನಾಗಿರಬೇಕು ಎಂದೇ  ಕನವುತ್ತಾ ಇಂದನ್ನು ಮುಂದಿಗಾಗಿ ಅಣಿ ಮಾಡುತ್ತೇವೆ . ಇಂದನ್ನು ನಿರ್ಮಿಸಲು ಈ ಹಿಂದೆಯ 'ಇಂದಲ್ಲಿ ' ಶ್ರಮ ಪಟ್ಟಿರುತ್ತೇವೆ. ನಾಳೆಯು ನಮ್ಮೆಡೆಗೆ ಬಂದಾಗಲೂ ಅದನ್ನು ಇಂದೆಂದೇ ಎಣಿಸಿ ಮತ್ತೆ ಮುಂದಿಗಾಗಿ ಗೆಜ್ಜೆ ಕಟ್ಟುತ್ತೇವೆ. ಬದುಕು ಚಲಿಸುತ್ತಾ ಸಾಗುತ್ತದೆ . ನಾವೆಣಿಸುವ ನಾಳೆ ಬರೋದೆ ಇಲ್ವಲ್ಲ... !!! 'ನಾಳೆ''ಗಾಗಿ ಕಾದವರಿಗೆ ಅದು 'ಇಂದಾ'ಗಿ ಬಂದಿರುವುದು ಅರಿವಿರುವುದಿಲ್ಲ. ಮತ್ತೆ ಎಂದಿನಂತೆ ನಾಳೆಗಾಗಿ ಕಾಯುತ್ತಾರೆ. ಮೈಯೆಲ್ಲಾ ನೆರೆಗಟ್ಟಿ , ಕೈಕಾಲು ಬಲಗುಂದಿ, ತಲೆಕೂದಲು ಬಿಳಿಯಾಗಿ i mean to say ಮುದಿಯಾಗಿ ಕೊನೆಯುಸಿರು ಒಳಹೊಕ್ಕುವವರೆಗೆ.  ಆಮೇಲೆ ಎಲ್ಲಿಯ ಇಂದು ನಾಳೆ ? ಎಲ್ಲವೂ  
ನಿನ್ನೆ,ಮೊನ್ನೆ,.................